ಗುರುವಾರ, ನವೆಂಬರ್ 17, 2016

ಗೋವಿಂದ

ಕೃಷ್ಣ ನಿನ್ನ ಕಣ್ಣ ನೋಟ 
ನೋಡಲೆಷ್ಟು ಅಂದ   .... ಪ 
ಸಣ್ಣ ಕೊಳಲನೂದುತ 
ಕಣ್ಣು ಹೊರಳಿಸುವುದೇ ಚಂದ --- ಆ ಪಲ್ಲ 

ಅಂಬೆಗಾಲು ಇಡುತ ಬರುವ 
ಮಂದಹಾಸ ವೆಷ್ಟು ಚಂದಾ 
ನೊಂದ ಮನಸುಗಳಿಗೂ ನೀ  ಆ-
ನಂದ ತರುವೇ  ನಗುವಿಂದಾ  

ಹಾಲು ಮೊಸರು ಬೆಣ್ಣೆ ಕದ್ದು 
ಕಾಲುಕಿತ್ತಿದೆ ಮನೆಯಿಂದ 
ಬಾಲ ಲೀಲೆಗಳ ಬಣ್ಣಿಸಲಾರೆ 
ಆಲಯದೊಳು ಬಾ ಗೋವಿಂದಾ   

ಗೋವರ್ಧನ ಗಿರಿಯನೇ ಎತ್ತಿ 
ಹಾವು ಹೆಡೆಮುರಿದೆ ಕಾಳಿಂಗಾ     
ಮಾವು ತೋಟದಲಿ ಹಾಲು ಕುಡಿದು 
ಜೀವ ಹೀರಿದೆ ಪೂತನಿ ಎದೆಯಿಂದ   

ಕರೆದು ಗೋಪಿಯರ ಕೈಯ ಹಿಡಿದು 
ಮರೆಸಿ ಆವರಿಸಿದೆ ಮೋಹದಿಂದ 
ಸೆರೆಗ ಎಳೆಯುತಾ ಮಡಿಕೆ ಒಡೆಯುತಾ 
ತೋರುತಿಹೆ ಆಟ  ಮುದದಿಂದಾ  
 
ಪ್ರೀತಿಯಿಂದ ಬೇಡಿಕೊಂಬೆ ಬಾ 
ಪ್ರಭಂಜನನ ಹೃದಯದೊಳಗಿಂದ 
ಪ್ರತೀದಿನವೂ ನಿನ್ನಾರಾಧಿಸಿ  
ಪ್ರಾರ್ಥಿಸುವೆ ಸಲಹೋ ದಯದಿಂದ

ಭಾನುವಾರ, ನವೆಂಬರ್ 13, 2016

** ಜಲವಿಲ್ಲದೆ***


ಜಲವೇ  ಜೀವದ ನಿಜವಾದ ಉಸಿರು 
ಜಲವಿಲ್ಲದೆ  ಉಳಿಯುವುದೇ ಭೂಮಿಯ ಹಸಿರು  

ಭಗೀರಥನ ಪ್ರಾರ್ಥನೆಗೆ ಭೂಮಿಗೆ ಇಳಿದಿ 
ಗಂಗಾದಿ ಸಕಲ ನದಿ ತೀರ್ಥಗಳಾಗಿ ಹರಿದೀ 
ಅಗಸ್ತ್ಯರ ಅನುಗ್ರಹದಿ ಸಾಗರವಾಗಿ ಮೆರೆದಿ 
ಬಗೆಬೆಗೆಯ ಜೀವಸಂಕುಲದ ಮನೆಯಾಗಿರಿವಿಯೊ  

ಹುಟ್ಟಿದ ತಕ್ಷಣ ದೇಹ ಶುಚಿ ಮಾಡಿಸುವಿ 
ಸುಟ್ಟದೇಹದ ಬೂದಿಗೆ ಸಾರ್ಥಕತೆ ಕೊಡುವಿ 
ಊಟ, ತೀರ್ಥ, ಸ್ನಾನ,ತರ್ಪಣದಿ ನೀ ಇರುವಿ 
ಕಟ್ಟ ಕಡೆಯ ಕೊಳೆಯನ್ನು ತೊಳೆದುಬಿಡುವಿಯೋ  

ಜಡ ಪ್ರಾಣಿ ಸಮೂಹದ ದಾಹವ ತಣಿಸುವಿ 
ಕಡಿದಾದ ದಾರಿಲಿ ಜಲಪಾತವಾಗಿ ಧುಮುಕುವಿ 
ಒಡೆಯನೇ ನಾನೆಂದು ಒಣ ಜಗಳ ಹಚ್ಚುಸುವಿ 
ಅಡಿಅಡಿಗಳಲ್ಲಿ ಅಳೆದು ನಿನ್ನ ಅಳಿಸಿಕೊಳ್ಳುವಿಯೋ 

ದೇವ ಪೂಜೆಯಲ್ಲಿ ನೀನೇ  ಮೊದಲಾಗಿರುವಿ 
ಭಾವಿ ಕೆರೆ ತೊರೆ ಹಳ್ಳಕೆ ಹೊಸರೂಪ ನೀಡುವಿ 
ಭುವಿಗೆ ಹಚ್ಚ ಹಸಿರ ಸೀರೆ ಉಡಿಸಿ ನಗುವಿ 
ಭಾವನೆಗಳ ಬಿತ್ತಿ ಎಲ್ಲರ ಮನತಣಿಸುವಿಯೋ 

ಎಲ್ಲವನು ಕೊಟ್ಟು ನೀ ಉದಾರಿಯಾಗಿರುವಿ 
ಕೊಲ್ಲುತಿರುವೆವು ನಾವು ನಿನ್ನ ಮಲಿನಗೊಳಿಸಿ 
ಸಲ್ಲಿಸಿ ಗೌರವ ಪರಿಸರ ಕಾಪಾಡಿಕೊಳ್ಳದೆ ಹೋದರೆ 
ವಲ್ಲದ ಮನಸಿಂದ ಜೀವ ತೆಗೆದುಬಿಡುವಿಯೋ